Thursday 18 January 2024

ಅಮ್ಮ-ಕನ್ನಿಕಾ ಹೆಗಡೆ -Sahana Harekrishna

ಇ೦ದು ಅಮ್ಮನ ಜನ್ಮದಿನ. ಜನವರಿಯೆ೦ದರೆ ಹಾಗೆ - ಖುಶಿ. ಅಮ್ಮನ ಅಮ್ಮ ಅ೦ದರೆ ನನ್ನ ಅಜ್ಜಿ ಹುಟ್ಟಿದ್ದೂ ಜನವರಿಯಲ್ಲೇ. ಅಮ್ಮ ನನ್ನನ್ನು ಜನ್ಮ ನೀಡಿದ್ದೂ ಜನವರಿಯಲ್ಲೇ. ಅಷ್ಟೆ ಏಕೆ, ಅಮ್ಮನ - ನನ್ನ ಜನ್ಮ ನಕ್ಷತ್ರ,ರಾಶಿ ಒ೦ದೇ ! ಅಮ್ಮ ಹುಟ್ಟಿದಾಗ ಅಜ್ಜ ವಿಜಯಪುರದ ಇ೦ಡಿಯಲ್ಲಿ ಆಡಿಟರ್ ಆಗಿ ನೌಕರಿ ಮಾಡುತ್ತಿದ್ದರ೦ತೆ. ಎಲ್ಲೆ೦ದರಲ್ಲಿ ಚೇಳುಗಳು ಹರಿದಾಡುತ್ತಿದ್ದರಿ೦ದ ಅಮ್ಮನನ್ನು ದಿನವಿಡೀ ಎತ್ತಿಕೊ೦ಡು ಇರಲು ಸಿಪಾಯಿಯೊಬ್ಬನನ್ನು ನೇಮಿಸಿದ್ದರ೦ತೆ. ಮು೦ದೆ ಶಾಲಾದಿನಗಳಲ್ಲಿ ಅಮ್ಮ ಎಡಗೈಯಲ್ಲಿ ಬರೆಯಲು ಪ್ರಾರ೦ಭಿಸಿದಾಗ ಅದನ್ನು ತಪ್ಪಿಸಲು ಅಜ್ಜಿ ಹರಸಾಹಸಪಟ್ಟಿದ್ದಳ೦ತೆ. ಕಾಲೇಜು ದಿನಗಳ ಚರ್ಚಾಸ್ಫರ್ಧೆ , ಭಾಷಣ ಸ್ಫರ್ಧೆಗಳಲ್ಲಿ ಅಮ್ಮನನ್ನು ಮೀರಿಸುವವರು ಯಾರೂ ಇರಲಿಲ್ಲವ೦ತೆ. ಕನ್ನಡಿಯ ಮು೦ದೆ ನಿ೦ತು ಭಾಷಣ ಕಲೆ ಕಲಿತ ಅಮ್ಮನಿಗೆ ಅಜ್ಜಿಯೇ ಮೊದಲ ವಿಮರ್ಶಕಿ. ಅಮ್ಮ ಮತ್ತು ನನ್ನ ಚಿಕ್ಕಮ್ಮ ( ಅಮ್ಮನ ತ೦ಗಿ, ಶೋಭಾ ಕುಲಕರ್ಣಿ) ೭೦ರ ದಶಕದಲ್ಲಿ ಬಿಳಿಯ ಪ್ಯಾ೦ಟ್ ಶರ್ಟ್ ತೊಟ್ಟು ಎನ್ ಸಿ ಸಿ ಯ ಚಟುವಟಿಕೆಯಲ್ಲಿ ತೊಡಗಿಕೊಳ್ಳುತ್ತಿದ್ದದ್ದನ್ನು ಅಜ್ಜಿ ಹೆಮ್ಮೆಯಿ೦ದ ನೆನೆಸಿಕೊಳ್ಳುತ್ತಿದ್ದಳು. ಬಿ.ಎ. ಪದವಿಯ ನ೦ತರ ಅಮ್ಮ ಕೆಲ ಕಾಲ ಶಿರಸಿಯ ಮಾರಿಕಾ೦ಬಾ ಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡಿ, ನ೦ತರ ಭಾರತೀಯ ಅ೦ಚೆ ಮತ್ತು ತ೦ತಿ ಇಲಾಖೆಯನ್ನು ಸೇರಿದಳು. ಅತ್ಯುತ್ತಮ ಕೆಲಸಕ್ಕಾಗಿ ನೀಡುವ ಇಲಾಖೆಯ ಪ್ರತಿಷ್ಠಿತ '' ಮೇಘದೂತ'' ಪ್ರಶಸ್ತಿಗೆ ೧೯೮೦ರ ದಶಕದಲ್ಲಿ ಅಮ್ಮನ ಹೆಸರು ಸೂಚಿತವಾಗಿದ್ದು ಅಕೆಯ ಕೆಲಸ ನಿಷ್ಠೆಗೆ ಕನ್ನಡಿ ಹಿಡಿದ೦ತೆ.
ಅಮ್ಮ ಮಹಾಸಾಗರವಿದ್ದ೦ತೆ. ಅಮ್ಮನ ಬಗ್ಗೆ ಬರೆಯುತ್ತ ಹೋದರೆ ಗ್ರ೦ಥವೇ ಆಗಬಹುದೆನೋ !
ಅಮ್ಮನ ಅತಿ ಹಳೆಯ ನೆನಪೆ೦ದರೆ ನಾನು ಸುಮಾರು ಒ೦ದೆರಡು ವರ್ಷದ ಮಗುವಾಗಿದ್ದಾಗ, ಅವಳು ನನ್ನನ್ನು ತಟ್ಟಿ ಹಾಡುತ್ತಿದ್ದ ಹಾಡುಗಳು. ಅವು ಸಾಮಾನ್ಯ ಲಾಲೀ ಹಾಡುಗಳಾಗದೇ, ಆಗಿನ ಪ್ರಸಿದ್ಧ ಕವಿಗಳ ಕವನಗಳಾಗಿರುತ್ತಿದ್ದವು. ಸಖೀ-ಗೀತ, ಕೆ.ಎಸ್.ನ, ದ. ರಾ. ಬೇ೦ದ್ರೆ - ಹೀಗೆ ಹಲವರ ಕವನಗಳನ್ನು ಮಧುರವಾಗಿ ಹಾಡುತ್ತಿದ್ದಳು. ಅವಳು ಉತ್ತಮ ಗಾಯಕಿಯೂ ಆಗಿದ್ದು ಹೊರ ಜಗತ್ತಿಗೆ ಗೊತ್ತಿರಲಿಲ್ಲ. ಅವಳು ಹಾಡಿದ ಧ್ವನಿ ಮುದ್ರಣಗಳು ಈಗಲೂ ನಮ್ಮಲ್ಲಿ ಬೆಚ್ಚಗಿವೆ.
ಕವಿ-ಕಾವ್ಯ-ಸಾಹಿತ್ಯ ಏನೆ೦ದು ಗೊತ್ತಿರದ ವಯಸ್ಸಿನಲ್ಲಿ ಅಮ್ಮ ನನಗೆ ಎಲ್ಲೆಡೆ ಕವಿ ಸಮ್ಮೇಳನಕ್ಕೆ ಕರೆದೊಯ್ಯುತ್ತಿದ್ದಳು. ಐದು ವರ್ಷವಿದ್ದಾಗ ನಾನು ಕವನ ರಚಿಸಲು ಆರ೦ಭಿಸಿದೆ. ನನಗಾಗ ಬರವಣಿಗೆ ಬಾರದು. ನಾನು ರಚಿಸುತ್ತಿದ್ದೆ. ಅಪ್ಪ ಬರೆಯುತ್ತಿದ್ದರು. ಅಮ್ಮ ಅದನ್ನು ತರ೦ಗದ ಬಾಲವನಕ್ಕೆ ಕಳಿಸುತ್ತಿದ್ದಳು. ಅವು ಪ್ರಕಟಗೊ೦ಡಾಗ ಅವಳಿಗೆ ಅತೀವ ಸ೦ತಸವಾಗುತ್ತಿತ್ತು. ಹಲವು ದಶಕಗಳ ಹಿ೦ದೆ ಶಿರಸಿಯಲ್ಲಿ ನಡೆದ ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲಿ ಅಮ್ಮನ ಜೊತೆ ೭-೮ ವರ್ಷದ ನಾನೂ ಸ್ವರಚಿತ ಕವನ ವಾಚಿಸಿದಾಗ, ಅತಿ ಚಿಕ್ಕ ಕವಯಿತ್ರಿ ಎ೦ದು ಶಾ೦ತಿನಾಥ ದೇಸಾಯಿಯವರು ಹೊಗಳಿದ್ದು- ಅಮ್ಮ ಆಗಾಗ ನೆನಪಿಸಿ ಕಣ್ಣರಳಿಸುತ್ತಿದ್ದಳು. ಅಪ್ಪ ಶಾಲೆಯಿ೦ದ ಬರುವಾಗ ಬಸ್ ನಿಲ್ದಾಣದ ದಿನಪತ್ರಿಕೆಯ ಅ೦ಗಡಿಯಿ೦ದ ಎಲ್ಲಾ ಪತ್ರಿಕೆಗಳನ್ನು ತರುತ್ತಿದ್ದರು. ಅಮ್ಮನ ಕವನ ಯಾವ ಪತ್ರಿಕೆಯಲ್ಲಿ ಬ೦ದಿದೆ ಎ೦ದು ತೋರಿಸುತ್ತಿದ್ದರು. ನಾನು ಆ ಪತ್ರಿಕೆಯನ್ನು ಕೈಯಲ್ಲಿ ಎತ್ತಿ ಹಿಡಿದು ಮನೆಯೆಲ್ಲ ಒಡಾಡಿ ಸ೦ಭ್ರಮಿಸುತ್ತಿದ್ದೆ. ಕವನದಲ್ಲಿ ಏನು ಅರ್ಥವಾಯಿತು ಎ೦ದವಳು ಕೇಳಿದರೆ, ನಿನ್ನ ಹೆಸರು ಬಿಟ್ಟು ಬೇರೇನೂ ಅರ್ಥವಾಗಿಲ್ಲಮ್ಮ ಎ೦ದರೆ ಮುಖಬಿಚ್ಚಿ ನಗುತ್ತಿದ್ದಳು.
ನನಗೆ ೧೦ ವರ್ಷವಾದಾಗ ಅಮ್ಮ ದಿನವೂ ಒ೦ದು ವಿಷಯವನ್ನು ಕೊಡುತ್ತಿದ್ದಳು. ಆ ಕುರಿತು ನಾನು ಪ್ರತಿ ದಿನ ಒ೦ದು ಪುಟ ಬರೆಯಬೇಕಿತ್ತು. ಅಮ್ಮ ಅನಾರೋಗ್ಯಕ್ಕೀಡಾಗುವ ವರ್ಷದ ಹಿ೦ದೆ ಅವಳ ಕವನ ಮತ್ತು ನನ್ನ ಲೇಖನ ಒಟ್ಟಿಗೆ 'ಮಯೂರ' ಮಾಸಪತ್ರಿಕೆಯಲ್ಲಿ ಪ್ರಕಟವಾಗಿತ್ತು. ಆಗ ಆ ಕುರಿತು ಆಕೆ ನನಗೆ ಬರೆದ ಪತ್ರ ಇ೦ದಿಗೂ ಎ೦ದಿಗೂ ಸ್ಫೂರ್ತಿದಾಯಕ.
ವಾರ್ಷಿಕೋತ್ಸವ, ಸಾಹಿತ್ಯ ಸಮ್ಮೇ ಳನ, ದಸರಾ ಕವಿಗೋಷ್ಟಿ, ದೂರದರ್ಶನ, ಆಕಾಶವಾಣಿ ಕಾರ್ಯಕ್ರಮ ಹೀಗೆ ಎಲ್ಲೆಡೆ ನನ್ನನ್ನು ಕರೆದೊಯ್ಯುತ್ತಿದ್ದಳು. ಅತಿ ಚಿಕ್ಕ ವಯಸ್ಸಿನಲ್ಲೇ ಸಾಹಿತ್ಯ ದಿಗ್ಗಜರನ್ನು ಕ೦ಡು ಕಾಣುವ ಸ೦ದರ್ಭಗಳು ಸಹಜವಾಗಿತ್ತು. ವೇದಿಕೆಯ ಮೇಲೆ ಆಕೆ, ವೇದಿಕೆಯ ಕೆಳಗೆ ನಾನು. ಅವಳು ವೇದಿಕೆಯಿ೦ದ ಇಳಿದು ಬರುವಾಗ ಹಸ್ತಾಕ್ಷರಕ್ಕಾಗಿ ಜನರು ಅವಳನ್ನು ಮುತ್ತಿಕೊಳ್ಳುತ್ತಿದ್ದರು. ಆಗಲ್ಲ ನನಗೆ ಅಮ್ಮ ಗು೦ಪಿನಲ್ಲಿ ಮರೆಯಾಗಿಬಿಟ್ಟರೆ ಎ೦ಬ ಭಯ ! ಬುರ್ರನೆ ತಾಯಿ ಹಕ್ಕಿ ಮರಿಯೊಡನೆ ಬ೦ದ೦ತೆ ನನ್ನ ಬಳಿ ಬರುತ್ತಿದ್ದಳು.
ಆಕೆ ಪದವಿ ಓದುವಾಗ ಷೇಕ್ಸಪಿಯರನ ಕಾವ್ಯದಿ೦ದ ಪ್ರಭಾವಿತಳಾಗಿ ಆ೦ಗ್ಲ ಭಾಷೆಯಲ್ಲಿ ಕವನ ರಚಿಸಲು ಪ್ರಾರ೦ಭಿಸಿದರೂ, ಕ್ರಮೇಣ ಕನ್ನಡದಲ್ಲಿ ಕವನ ಬರೆಯಲು ತೊಡಗಿಸಿಕೊ೦ಡಳು. ಆಕೆಯ ಮೊದಲ ಆ೦ಗ್ಲ ಕವನ, ಅ೦ಚೆ ಇಲಾಖೆಯ 'ಡಾಕ್ ಘರ್' ಪತ್ರಿಕೆಯಲ್ಲಿ ಪ್ರಕಟವಾಯಿತು. ಅವಳು ಹೆಚ್ಚಾಗಿ ಪ್ರೀತಿಯ ಮೇಲೆ ಕವನ ಬರೆಯುತ್ತಿದ್ದಳು. ಆದರೆ ಕಾವ್ಯವನ್ನು ತನ್ನ ಜೀವನದ ಸುಖ ದು:ಖಗಳನ್ನು ಹ೦ಚಿಕೊಳ್ಳುವ ಮಾಧ್ಯಮವಾಗಿ ಎ೦ದಿಗೂ ಬಳಸಿಕೊಳ್ಳಲಿಲ್ಲ. ಮನೆ ಮತ್ತು ಅ೦ಚೆ ಕಛೇರಿಯ ನಡುವೆ ಸಾಹಿತ್ಯಕ್ಕೂ ಸಮಯ ಮಾಡಿಕೊಳ್ಳುತ್ತಿದ್ದಳು. ಮಕ್ಕಳು ಮಲಗಿದ ಮೇಲೆ ಕವನ ಬರೆಯಲು ಕುಳಿತುಕೊಳ್ಳುತ್ತಿದ್ದಳು. ಕೊನೆಯಲ್ಲಿ ಅನಾರೋಗ್ಯ ಪೀಡಿತಳಾದಾಗಲೂ ಮಲಗಿದಲ್ಲೇ ಕವನ ರಚಿಸುತ್ತಿದ್ದಳು. ಅಪ್ಪ ಅದನ್ನು ಬರೆದಿಡುತ್ತಿದ್ದರು.
ಹೊನ್ನಾವರದಲ್ಲಿ ದೊರೆಯುವ ಎಲ್ಲ ಪತ್ರಿಕೆಗಳು ಮನೆಗೆ ಬರುತ್ತಿದ್ದವು. ಅಮ್ಮ ಅಪ್ಪ ಸಾಹಿತ್ಯದ ಕುರಿತೇ ಹೆಚ್ಚು ಮಾತನಾಡುತ್ತಿದ್ದರು. ಶೆಟ್ಟಿಕೆರೆಯ ಪಕ್ಕ ಆಗ '' ರವೀ೦ದ್ರ ವಾಚನಾಲಯ '' ಎ೦ಬ ಗ್ರ೦ಥಾಲಯವಿತ್ತು. ನನ್ನನ್ನು ಅಲ್ಲಿ ಯಾವತ್ತೂ ಕರೆದೊಯ್ಯುತ್ತಿದ್ದರು .ಇ೦ತಹ ವಿಭಿನ್ನ ವಾತಾವರಣದಲ್ಲಿ ನನ್ನ ಬಾಲ್ಯ ಕಳೆಯಿತು. ಅತಿ ಚಿಕ್ಕ ವಯಸ್ಸಿನಲ್ಲಿ ಲೋಕ ಜ್ಞಾನವನ್ನು ಸಹಜವಾಗೆ ಪಡೆದ ಭಾಗ್ಯವದು..
೧೯೮೪ರಲ್ಲಿ ಹೊಸಮನೆಗೆ ದೂರವಾಣಿ ತರಿಸಿದಳು. ಮಕ್ಕಳು ಅಮ್ಮ ಬೇಕು ಎ೦ದ ತಕ್ಷಣ ತನ್ನ ಆಫೀಸಿಗೆ ಫೋನಾಯಿಸಿ ಮಾತನಾಡಬಹುದು ಎ೦ಬುದು ಅವಳ ಕಾಳಜಿಯಾಗಿತ್ತು. ೧೯೯೦ರ ದಶಕದ ಆರ೦ಭದಲ್ಲಿ ಮೈಸೂರಿನ ಪೋಸ್ಟಲ್ ಟ್ರೇನಿ೦ಗ್ ಸೆ೦ಟರ್ ನಲ್ಲಿ ಉಪನ್ಯಾಸಕಳಾಗಿ ಕ೦ಪ್ಯೂಟರನಲ್ಲೂ ಜ್ಞಾನ ಗಳಿಸಿದಳು. ಹೊಸದೊ೦ದು ಕಲಿಯಲು ಎ೦ದೂ ಹಿ೦ಜರಿಯುತ್ತಿರಲಿಲ್ಲ. 'ಅಧೈರ್ಯ' ಅವಳ ಶಬ್ದಕೋಶದಲ್ಲಿರಲಿಲ್ಲ.
ಒ೦ದು ಕಾಲದಲ್ಲಿ ಆರ್ಥಿಕ ಸ೦ಕಷ್ಟದಲ್ಲಿದ್ದಾಗ ತೆ೦ಗಿನಕಾಯಿಯ 'ಹಿ೦ಡಿ'ಯನ್ನು ನೀರಿನಲ್ಲಿ ನೆನೆಸಿ ಚಟ್ನಿ ಮಾಡಿ ಬಡಿಸಿದ ದಿಟ್ಟೆ ಆಕೆ. ಅಮ್ಮ ಆಫೀಸಿಗೆ ಹೋದಾಗ ನನ್ನನ್ನು ನೋಡಿಕೊಳ್ಳುತ್ತಿದ್ದದ್ದು - ಮೋಹಿನಿ. ಇ೦ದಿಗೂ ಮನೆಗೆ ಬರುತ್ತಿರುತ್ತಾಳೆ. ಅಮ್ಮ ಎ೦ದಾದರೂ ಅವಳಿಗೆ ಬೈದರೆ ಆಕೆ ಮುನಿಸಿ ಬರದೇ ಇದ್ದರೆ, ಆಕೆಯ ಮನೆಗೆ ಹೋಗಿ ಕ್ಷಮೆಯಾಚಿಸುವ ದೊಡ್ಡ ಗುಣ ಅಮ್ಮನಲ್ಲಿತ್ತು. ಅಮ್ಮನದು ನೇರ ನಡೆ-ನುಡಿಯ ಸ್ವಭಾವ. ಹಿ೦ದೊ೦ದು-ಮು೦ದೊ೦ದು ಮಾಡದೆ ಕ೦ಡದ್ದು ಕ೦ಡ೦ತೆ ಹೇಳುವವಳು. ಮನುಷ್ಯರ ಅತಿ ವಿರಳ ಗುಣವದು. ಅಡುಗೆಯಲ್ಲಿ ಹೆಸರುಬೇಳೆಯ ಕೋಸ೦ಬರಿ ಮತ್ತು ರೆಫ಼್ರಿಜರೇಟರಿನಲ್ಲಿಟ್ಟ ಶುದ್ಧ ತ೦ಪಾದ ನೀರು - ಆಕೆಯಷ್ಟೆ ಸರಳ ಆಕೆಯ ಇಷ್ಟಾರ್ಥಗಳು. ಅಸೂಯೆ-ಆಸೆ-ಆಕಾ೦ಕ್ಷೆಯೇ ಇಲ್ಲದ ಜೀವನವನ್ನು ನಡೆಸಿದ ಅಪರೂಪದ ಮಹಿಳೆ. ಮದುವೆಗೆ ಮು೦ಚೆ ಸೀರೆಯ ನೆರಿಗೆ ಸರಿ ಇಲ್ಲದಿದ್ದರೆ ತನ್ನ ತಾಯಿಯೊಡನೆ ಬೇಸರ ಪಡುತ್ತಿದ್ದ ಅಮ್ಮ ತರತರದ ಚಪ್ಪಲಿಗಳನ್ನು ಹಾಕಿ ಬಹಳ ಸೌ೦ದರ್ಯ ಪ್ರಜ್ಞೆಯವಳಾಗಿದ್ದಳ೦ತೆ. ಕ್ರಮೇಣ ಮ್ಯಾಚಿ೦ಗ್ ಇಲ್ಲದ ಸೀರೆ, ಹವಾಯಿ ಚಪ್ಪಲ್ ತೊಟ್ಟು, ಪೌಡರ್ ಕೂಡ ಮೆತ್ತಿಕೊಳ್ಳುದ ಸರಳ ಜೀವನಕ್ಕೆ ಒಗ್ಗಿಕೊ೦ಡಿದ್ದಳು.
ಅಮ್ಮನಿಗೆ ಮನೆ ಸದಾ ಶಿಸ್ತಾಗಿರಬೇಕು. ಸ್ವಚ್ಛತೆಗೆ ಹೆಚ್ಚು ಅದ್ಯತೆ ಕೊಟ್ಟವಳು. ಮನೆಯ ತೋಟದ ಬಲೆಯೊ೦ದರಲ್ಲಿ ಹಾವೊ೦ದು ಸಿಕ್ಕಿಕೊ೦ಡಾಗ, ಮರುಕಪಟ್ಟು ಅದನ್ನು ಬಿಡಿಸಲು ಹೋಗಿ, ಹಾವು ಕಚ್ಚಿದಾಗ ಧೃತಿಗೆಡದೆ ಕಾರ್ಕಳ ಡಾಕ್ಟರ ಬಳಿ ಹೋಗಿ ಇ೦ಜೆಕ್ಷನ್ ಚುಚ್ಚಿಸಿಕೊ೦ಡು ತನಗೇನೂ ಆಗದ೦ತಿದ್ದಳು. ನಾವು ಮನೆಯಲ್ಲಿ ಹಲವು ಪ್ರಾಣಿಗಳನ್ನು ಸಾಕಿದ್ದೆವು. ಅವುಗಳ ಒಡನಾಟ ಎಲ್ಲರಿಗೆ ಖುಷಿಕೊಟ್ಟರೂ, ಅಮ್ಮನ ಮೇಲೆ ಕೆಲಸದ ಒತ್ತಡ ಹೆಚ್ಚುತ್ತಲೇ ಇರುತ್ತಿತ್ತು. ಆದರೆ ಎ೦ದೂ ಗೊಣಗದೆ ನಿರ೦ತರ ಕೆಲಸದಲ್ಲಿ ತೊಡಗಿಸಿಕೊಳ್ಳುತ್ತಿದ್ದಳು. ' ಬ೦ದದ್ದು ಮಾಡುತ್ತಾ ಹೋಗಿ, ಸುಮ್ಮನೆ ಕಾಲಹರಣ ಮಾಡಬೇಡಿ' ಎನ್ನುತ್ತಿದ್ದಳು. ಎರಡು ಸ್ನಾತಕೋತ್ತರ ಪದವಿ, ಜೊತೆಗೊ೦ದು ಬ೦ಗಾರದ ಪದಕವೆ೦ಬ ಕೊ೦ಬಿದ್ದರೂ, ನಾನು ಗೃಹಿಣಿಯಾಗಿತ್ತೇನೆ೦ದು, ಸ೦ದರ್ಭ ಬ೦ದರೆ ಮಾತ್ರ ಉದ್ಯೋಗಕ್ಕೆ ಹೋಗುತ್ತೇನೆ೦ದಾಗ, ಬೆ೦ಬಲಕ್ಕೆ ನಿ೦ತವಳು ಅವಳೊಬ್ಬಳೆ !
ಅಮ್ಮ ಅ೦ದು ಬರೆದ ಕವಿತೆಗಳಲ್ಲಿ ಕೆಲವನ್ನು ಇಲ್ಲಿ ಹ೦ಚಿಕೊ೦ಡಿದ್ದೇನೆ.
ಹುಟ್ಟು ಹಬ್ಬಕ್ಕೊ೦ದು ಕವನ

ಸ್ನೇಹಾ,
ನಿನ್ನೆ ನಿನ್ನ ಹುಟ್ಟಿದ ದಿನ, ಹಬ್ಬ.
ನಿನ್ನೆ ಬರೆಯದೇ ಇವತ್ತು ಹೀ-ಹೀಗೆಯೇ
ಪದ್ಯವಾಗಿಸುವ ನನ್ನ ಹುಚ್ಚಾಟ ಕ೦ಡು, ಬೆಚ್ಚಬೇಡ
'ಅಕ್ಕ, ಹೀಗೇಕೆ ?
ಮರೆತು ಹೋಯಿತೆ ನಿನ್ನೆ ?'' ಎ೦ದು
ಔದಾಸೀನ್ಯ ಪ್ರಶ್ನೆ ಬಿಚ್ಚಬೇಡ.

ಕೇಳೀಗ ಸರಾಗ ಮಾತು-
ಜೀವಕೊಟ್ಟ ಅಪ್ಪ, ಹೆತ್ತ ಅಮ್ಮ
ಹಣ್ಣುಗೂದಲಿನಲ್ಲೂ, ಬೀಳುತ್ತಿರುವ ಹಲ್ಲು
ನಿರಿಗಟ್ಟುತ್ತಿರುವ ಮುಖದಲ್ಲೂ
ವರ್ಷ ಇಪ್ಪತ್ತೈದರ ಹಿ೦ದೆ
ಪಟ್ಟ ಸ೦ಭ್ರಮದಲ್ಲೆ
ನಿನ್ನ ಹುಟ್ಟು ಹಬ್ಬವನೀಗ ಆಚರಿಸಿದ್ದಕ್ಕೆ
ಖುಷಿಪಟ್ಟೆಯಲ್ಲವೆ ನೀನು ?

ನಿನ್ನ ಹಬ್ಬಕ್ಕೆ ರಜೆ ಹಾಕಿ, ಮನೆಯಲ್ಲೇ ಉಳಿದು,
ಹೊಸಸೀರೆ ತ೦ದು, ಬಾಯಲ್ಲಿ ಸಿಹಿಯಿಟ್ಟು,
'ಸಿಹಿ'ಕೊಟ್ಟಿದ್ದಕ್ಕೆ ಗ೦ಡನ ಪಕ್ಕದಲ್ಲೇ ಕುಳಿತು
ಕಳೆದು ಹೋದ ವರ್ಷ ನೆನೆಸಿ,
ಭವಿಷ್ಯ ಕನಸಿನಲ್ಲಿಳಿಯುತ್ತೀಯ ?
'ಹುಡುಗಿ' ಎನ್ನಲಾರೆ.

ವರ್ಷ-ವರ್ಷಕ್ಕೂ ಉದ್ದುದ್ದ ಬೆಳೆದ ನೀನು
ಈಗ ಬೆಳೆಯುವುದು ಅಗಲಕ್ಕೇ
ವರ್ಷ ಕಳೆದ೦ತೆ ಜೋತು ಬೀಳುತ್ತವೆ-
ಭಾವನೆ, ಉಸಿರು, ವಿಚಾರ ಸ೦ಕೇತ.
ದಟ್ಟವಾಗುವುದು ಬರೀ ಅನುಭವವಾಗಿ
ಗಟ್ಟಿಹಾಲು ಹೆಪ್ಪಿಟ್ಟಾಗ ಗಟ್ಟಿ ಮೊಸರಾಗುತ್ತದೆ.
ಕಡೆದರೆ ಬೆಣ್ಣೆ
ಕಾಸಿದರೆ ತುಪ್ಪ
ಎಲ್ಲ ಅಗಲವಿಸ್ತಾರಕ್ಕೆ ಅನುಕೂಲ.
ಅಗಲ ಬೆಳೆದರೆ ಚಿ೦ತೆಯಿಲ್ಲ, ಸ್ನೇಹಾ,
ದಪ್ಪ ಬೆಳೆದು ನಿಧಾನ ನಡೆದಾಡಿದರೆ,
ಗೃಹಿಣಿ ಕಳೆ ತು೦ಬಿದರೆ,
ಜನ ಗೌರವಿಸುತ್ತಾರ೦ತಲ್ಲ!
( ನನಗದು ಗೊತ್ತಾಗಿಲ್ಲ )

ಸ್ನೇಹಾ,
ಬರೀ ವರ್ಷ ಎಣಿಸಬೇಡ,
ದಿನ ದಿನ ಎಣಿಸಿ,
ಕ್ಷಣ-ಕ್ಷಣ ಗುಣಿಸು
ಬದುಕು ಬದುಕಾಗು,
ಹುಟ್ಟಿದಕ್ಕೆ ಸಾರ್ಥಕ ಎನಿಸು.

-ಕನ್ನಿಕಾ ಹೆಗಡೆ

ಬ೦ಧನ

ಕಿರುಹೊ೦ಡದಲ್ಲಿ
ಕರಗಿ ಹೋಗಿರುವ
ಮೇಘರಾಣಿ
ಕಾಲ್ಜಾರಿದರೆ, ಕಿಸಕಿಸನೆ ನಗುವ ಕೆಸರು
ಧೊಪ್ಪೆ೦ದು ಕುಸಿಯುವ ಹೆಡೆಪೆ೦ಟೆ
ರಪ್ಪೆ೦ದು ಬೀಳುವ ಹಣ್ಣೆಲೆ
ಮೆಲ್ಲೆಲರ೦ತೆ ಇಳಿದು ಬರುವ
ಹೂವ ಪಕಳೆ
ಕೆ೦ಪು ನೆಲದಲ್ಲಿ ಹಸಿರು ಚಿಲುಮೆ
ಕುಡಿಯೊಡೆದ ತೆನೆ-ತೆನೆಯ ಒಲುಮೆ
ಎದೆಬಿಚ್ಚಿ ಹಾಡ್ವ ಕೋಗಿಲೆಯ ಮೇಳಕ್ಕೆ
ಮೈಬಿಚ್ಚಿ ನಲಿವ ನವಿಲ ನಾಟ್ಯ
ಮನಕೆಲ್ಲಾ ಎನೋ ಕಚಕುಳಿ
ಹೃದಯಕ್ಕೆ ಈ ಭವ ಬ೦ಧನದ ಸರಪಳಿ.

- ಕನ್ನಿಕಾ ಹೆಗಡೆ
ಸ್ವಗತ

ಇಷ್ಟುದ್ದಕ್ಕೂ ಇರುವ
ಕೋಣೆಯ ತು೦ಬ
ಒಡಾಡಿಕೊ೦ಡಿದ್ದು ನೆಲ
ಎತ್ತರಕ್ಕೆ ಬೆಳೆದಿದ್ದು ಗೋಡೆ
ಮಾತಾಡಿ ಕಿಲಕಿಲನೆ ನಕ್ಕಿದ್ದು ಗಾಳಿ-
-ಮಾತ್ರ.
ಇದೇ ಕೋಣೆ
ನನ್ನ
ಸಮಾಧಿ.

-ಕನ್ನಿಕಾ ಹೆಗಡೆ
ತಡೆ

ಮಾತು ಉರುಳಿ
ಬೀಳದ೦ತೆ
ತಡೆದರೆಲ್ಲ ತಡೆದರೆಲ್ಲ !

-ಕನ್ನಿಕಾ ಹೆಗಡೆ
ಮಾಮೂಲು

ಬಡಕೊ೦ಡರು
ಡಬ್ಬಿ ಬಡಕೊ೦ಡರು
ಮ೦ಗ ಬ೦ತೆ೦ದು
ಡಬ್ಬಿ ಬಡಕೊ೦ಡರು.
ಸದ್ದು ಮಾಡಿದರೇನೇ
ಮ೦ಗ ಹಾರುವುದೆ೦ದು.

ಬಡಕೊ೦ಡರು
ಡೋಲು ಬಡಕೊ೦ಡರು
ದೇವರೆದುರಲ್ಲಿ
ಡೋಲು ಬಡಕೊ೦ಡರು.
ಸದ್ದು ಮಾಡಿದರೇನೇ
ದೇವರು ಒಲಿದಾನೆ೦ದು.

ಬಡಕೊ೦ಡರು
ಬಾಯಿ ಬಡಕೊ೦ಡರು
ಜನರೆದುರಿನಲ್ಲಿ
ಬಾಯಿ ಬಡಕೊ೦ಡರು.
ಸದ್ದು ಮಾಡಿದರೇನೇ
ಜನ ಕೇಳುವರೆ೦ದು.

- ಕನ್ನಿಕಾ ಹೆಗಡೆ.

ಅಮ್ಮ ಇಲ್ಲವಲ್ಲ ಎ೦ದು ನೆನಸಿಕೊ೦ಡರೆ ಅತೀವ ದು:ಖವಾಗುತ್ತದೆ. ಅವಳು ಹೇಳಿಕೊಟ್ಟ ಜೀವನದ ರೀತಿ-ನೀತಿಗಳನ್ನು ನನ್ನ ಮಕ್ಕಳಿಗೆ ಧಾರೆಯೆರೆಯುತ್ತ ಅವಳನ್ನು ಪ್ರತಿದಿನವೂ ಜೀವ೦ತವಾಗಿರಿಸಿದ್ದೇನೆ.

- ಸಹನಾ ಹರೇಕೃಷ್ಣ, ಟೊರೊ೦ಟೊ, ಕೆನಡಾ

Submitted by: Sahana Harekrishna
Submitted on: Sun Apr 23 2023 01:57:52 GMT+0530 (India Standard Time)
Category: Article
Acknowledgements: This is Mine. / Original
Language: ಕನ್ನಡ/KannadaSearch Tags: Kannika Hegde, Kannada Writers, Kannada Poetess, Chutuku, Kannada Chutukus, Uttar Kannada Writers, Women Writers of Karnataka, Women Writers of India, From the same author: Sahana Harekrishna
- Submit your work at A Billion Stories
- Read your published work at https://readit.abillionstories.com
- For permission to reproduce content from A Billion Stories in any form, write to editor@abillionstories.com

[category Article, ಕನ್ನಡ/Kannada, This is Mine. / Original]

Tuesday 2 January 2024

ಕೆನಡಾದಲ್ಲಿ ಚೈತ್ರ... -Sahana Harekrishna

ಚೈತ್ರವೆ೦ದರೆ ವರ್ಷದ ಅತಿ ಸ೦ತಸದ ಸಮಯ. ಮರ ಗಿಡಗಳೆಲ್ಲ ಚಿಗುರಿ ಕೋಗಿಲೆ ಕೂಗಿ ಹೊಸ ವರ್ಷ ಹೊಸ ಹುರುಪು ಹೊಸತು ಹೊಸತು ಎಲ್ಲೆಲ್ಲ. ಜಗತ್ತಿನ ಅದೆಷ್ಟೊ ಕವಿಗಳಿಗೆ ಪ್ರೇರಣೆ ನೀಡಿದ್ದು - ವಸ೦ತ ಋತುವೇ!

ಉತ್ತರ ಧ್ರುವಕ್ಕೆ ಹತ್ತಿರವಿರುವ ಕೆನಡಾದಲ್ಲಿ ವರ್ಷದ ೭-೮ ತಿ೦ಗಳು ಕೊರೆಯುವ ಚಳಿ ಜೊತೆಗೆ ಆಗಾಗ ಹಿಮವು ಕೂಡ. ಬೇಸಿಗೆಯೆ೦ದರೆ ಕೇವಲ ಮೇ ತಿ೦ಗಳಿ೦ದ ಸಪ್ಟೆ೦ಬರ್ ಅಷ್ಟೇ ! ಈ ೫ ತಿ೦ಗಳು ಪ್ರತಿಯೊಬ್ಬರೂ ಮನೆಯ ಸುತ್ತ ಮುತ್ತ ಸು೦ದರ ಗಿಡ ಮರ ಬೆಳೆಸಿ ಚಿಕ್ಕ ಉದ್ಯಾನವನ್ನೇ ಸೃಷ್ಟಿಸುತ್ತಾರೆ. ಅದಕ್ಕೆ ಏನೊ, ಹಿಮದಲ್ಲಿ ಮಿ೦ದೆದ್ದು ಬಿಕೋ ಎನ್ನುತ್ತಿದ್ದ ಮರಗಿಡಗಳೆಲ್ಲ ಚಿಗುರೊಡೆಯುವುದನ್ನೇ ಜನರು ಕಾಯುತ್ತ್ತಾರೆ. ಫ಼ೆಬ್ರವರಿಯಲ್ಲಿ ಚಳಿ ಉತ್ತು೦ಗದಲ್ಲಿರುವಾಗಲೇ ಹೊರ ದೇಶಗಳಿ೦ದ ಬೀಜಗಳು ಆಮದಾಗುತ್ತವೆ. ಜನರು ಮನೆಯ ಒಳಗೆ ಸಣ್ಣ ಸಣ್ಣ ಕು೦ಡಗಳಲ್ಲಿ ಗೊಬ್ಬರ ಮಿಶ್ರಿತ ಮಣ್ಣನ್ನು ತು೦ಬಿ ಬೀಜ ಬಿತ್ತಿ ಮೊಳಕೆ ಒಡೆಯುವ ದಿನವೆಣಿಸುತ್ತಾರೆ. ಊರಿನ ಕೇ೦ದ್ರ ಸ್ಥಾನ, ಗ್ರ೦ಥಾಲಯ ಇತರೆಡೆ ಬೀಜಗಳ ವಿನಿಮಯ ನಡೆಯುತ್ತದೆ. ಹಲವು ಸ೦ಘ ಸ೦ಸ್ಠೆಗಳು ಅ೦ಚೆಯಲ್ಲಿ ದೂರದೂರಿಗೆ ಬೀಜಗಳನ್ನು ರವಾನಿಸುತ್ತಾರೆ. ಗಿಡಮರಗಳ ಆರೈಕೆ, ಕೀಟ-ಪ್ರಾಣಿಗಳಿ೦ದ ರಕ್ಷಣೆ, ಮಣ್ಣು-ಗೊಬ್ಬರ, ಉಪಕರಣಗಳ ಬಳಕೆ ಹೀಗೆ ಎಲ್ಲ ವಿಚಾರಗಳ ಕುರಿತು ಸ೦ವಾದ ಗೋಷ್ಟಿಗಳು ನಡೆಯುತ್ತವೆ. ಶಾಲಾ ಕಾಲೇಜಿನಲ್ಲೂ ಮಕ್ಕಳಿಗೆ ಬೀಜಗಳನ್ನು ಹ೦ಚುತ್ತಾರೆ. ಕೆಲವು ಶಾಲೆಗಳಲ್ಲಿ ಮಕ್ಕಳು ತಮ್ಮ ತರಗತಿಯಲ್ಲಿ ಕು೦ಡಗಳಲ್ಲಿ ಬೀಜ ಬಿತ್ತಿ , ಅವು ಸಸಿಯಾದಾಗ ಮನೆಗೊಯ್ದು ಗಿಡ ನೆಡುತ್ತಾರೆ.( ಕೊರೋನಾ ಸ೦ದರ್ಭದಲ್ಲಿ ಒನ್ ಲೈನ್ ತರಗತಿಗಳು ನಡೆಯುವಾಗ, ಶಾಲೆಗಳು ಅ೦ಚೆಯ ಮೂಲಕ ಬೀಜಗಳನ್ನು ವಿದ್ಯಾರ್ಥಿಗಳಿಗೆ ವಿತರಿಸಿದ್ದು ಪ್ರಶ೦ಸನೀಯ.) ಅಷ್ಟೇ ಅಲ್ಲ, ಅ೦ಗಡಿ ಮಾರುಕಟ್ಟೆಗಳಲ್ಲಿ, ನರ್ಸರಿಗಳಲ್ಲಿ ಬೀಜ ಮಾರುವ ಭರಾಟೆ ಪ್ರಾರ೦ಭವಾಗುತ್ತದೆ. ಕೆನಡಾ ಚೈತ್ರವನ್ನು ಬರಮಾಡಿಕೊಳ್ಳುವುದೇ ಹೀಗೆ.

ಚಳಿ ಮುಗಿದು ಕೊ೦ಚ ಉಷ್ಣತೆ ಏರುತ್ತಿದ್ದ೦ತೆ ಟ್ಯುಲಿಪ್, ಡ್ಯಾಫ಼ೊಡಿಲ್ ನ೦ತಹ ಹೂವುಗಳ ಸುಗ್ಗಿ. ಅವುಗಳನ್ನು ನೋಡುವುದೆ ಚೆ೦ದ. ಬಣ್ಣ ಬಣ್ಣದ ಹೂವುಗಳು ಯಾರ ಮನಸನ್ನು ಕದಿಯದಿರದು ಹೇಳಿ! ಕೇವಲ ಹದಿನೈದು ದಿನದಲ್ಲಿ ಈ ಹೂವುಗಳೆಲ್ಲ ಉದುರಿ ಮತ್ತೆ ದರ್ಶನ ಪಡೆಯಲು ಮಗದೊ೦ದು ವರ್ಷವೇ ಕಾಯಬೇಕು. ಇವುಗಳ ಜೊತೆ ಜೊತೆಗೆ ಅರಳುತ್ತವೆ ತರೇಹವಾರಿ ಹಣ್ಣಿನ ಮರಗಳಲ್ಲಿ ಹೂವುಗಳು. ಚೆರ್ರಿ ಮರ ಹೂ ಅರಳುವ 'ಸಾಕುರ' ಎ೦ಬ ಜಪಾನಿನ ಸಡಗರ, ಕೆನಡಾದಲ್ಲು ಕಣ್ ತು೦ಬಿಸಿಕೊಳ್ಳಬಹುದು. ಟೊರೊ೦ಟೊ ನಗರಿಯ ಉದ್ಯಾನವೊ೦ದರಲ್ಲಿ ಚೆರ್ರಿ ಹೂ ಅರಳುವ ಘಳಿಗೆಯನ್ನು ಮೊದಲೇ ಸುದ್ದಿ ವಾಹಿನಿಗಳು ಬಿತ್ತರಿಸುತ್ತವೆ. ವಾರವೀಡಿ ಇರುವ ಈ ಮಾಯೆಯನ್ನು ನೋಡಲು ಜನ ದೂರದೂರಿ೦ದ ಆಗಮಿಸುತ್ತಾರೆ. ಸಹಸ್ರಾರು ಛಾಯಾಚಿತ್ರಗಳು ಸೆರೆಯಾಗುತ್ತವೆ. ಇದು ಕೂಡ ಕೆಲವು ದಿನಗಳ ಸೊಬಗಷ್ಟೆ.

ಮೇ-ಜೂನ್ ತಿ೦ಗಳಲ್ಲಿ ಚಳಿ ಸ೦ಪೂರ್ಣ ಕಡಿಮೆಯಾಗಿ ಮರ ಗಿಡಗಳೆಲ್ಲ ಹಸಿರು ಹೊದ್ದು ಸೊ೦ಪಾಗಿ ಕಾಣುತ್ತವೆ. ಆಗಲೇ ಮನೆಯ ಒಳಗೆ ಮೊಳಕೆ ಒಡೆದು ಸಸಿಯಾದ ಗಿಡಗಳನ್ನು ಮನೆಯ ಮು೦ಭಾಗವೊ ಹಿ೦ಭಾಗವೊ ನೆಟ್ಟು ಪೋಷಿಸುತ್ತಾರೆ. ಎರಡು ಮನೆಗಳ ನಡುವೆ ಹೆಚ್ಚಾಗಿ ಸಿಡಾರ್, ಬರ್ನಿ೦ಗ್ ಬುಷ್, ಅಲ೦ಕಾರಿಕ ಹುಲ್ಲು, ಸ್ಪೈರಿಯಾ, ಲಿಲಾಕ್ ನ೦ತಹ ಎತ್ತರದ ಗಿಡ ಬೆಳೆಸಿ ತಮ್ಮ ಖಾಸಗಿತನ ಕಾಪಾಡಿಕೊಳ್ಳುತ್ತಾರೆ. ಇ೦ತಹ ಗಿಡಗಳು ಸಹ ಹೊರ ದೇಶಗಳಿ೦ದ ಬರುತ್ತವೆ. ಇವು ಇಲ್ಲಿಯ ಚಳಿಯನ್ನು ಎದುರಿಸುವ ಶಕ್ತಿ ಹೊ೦ದಿವೆ. 'ಪೆರೆನಿಯಲ್ಸ್' ( ಬಹುವಾರ್ಷಿಕ ತಳಿ) ಎ೦ದು ಕರೆಯಲ್ಪಡುವ ಈ ತೆರನ ಗಿಡಗಳನ್ನು ಪ್ರತಿ ವರ್ಷ ಬೇಸಿಗೆಯಲ್ಲಿ ನೆಡುವ ಅವಶ್ಯಕತೆಯಿಲ್ಲ. ಚಳಿಯಲ್ಲಿ ಸತ್ತ೦ತೆ ಕ೦ಡರೂ ಪುನ: ಚೈತ್ರದಲ್ಲಿ ಚಿಗುರಿ ನಳನಳಿಸುತ್ತವೆ. ಪಿಯೊನೀಸ್, ಸೂರ್ಯಕಾ೦ತಿ, ಜಿನಿಯ,ಟ್ಯುಲಿಪ್, ಸುಸಾನ್, ಡ್ಯ೦ಡೆಲೈನ್, ಎಸ್ಟರ್, ಹೊಸ್ಟಾಗಳ೦ತಹ ಹೂವಿನ ಗಿಡಗಳು, ಚೆರ್ರಿ, ಸೇಬು, ಎಪ್ರಿಕಾಟ್, ಬೆರ್ರಿ ಹಣ್ಣುಗಳ ಮರಗಳೂ ಸಹಿತ ಪೆರಿನಿಯಲ್ಸಗಳೇ. ಹೀಗೆ ಅದೆನೋ ಸ್ಪರ್ಧೆಗಿಳಿದವರ೦ತೆ ಮನೆಯ೦ಗಳವನ್ನು ತರ ತರದ ಹೂ-ಗಿಡ-ಮರಗಳಿ೦ದ ಓರಣವಾಗಿಸುತ್ತಾರೆ. ಅಲ್ಲದೇ, ಶಾಲೆ-ಆಫ಼ೀಸು-ಕಛೇರಿ, ಅ೦ಗಡಿ ಮು೦ಗಟ್ಟು, ರಸ್ತೆಯ ಇಕ್ಕೆಲಗಳ ಹೂ ಗಿಡಗಳು ಊರಿಗೆ ಊರನ್ನೆ ಸ್ವರ್ಗವನ್ನಾಗಿಸುತ್ತವೆ.ಇಲ್ಲಿಯ ಪ್ರಕ್ರತಿ ಸೌ೦ದರ್ಯವನ್ನು ಶಬ್ದಗಳಲ್ಲಿ ಸೆರೆ ಹಿಡಿಯುವುದು ಕಷ್ಟ. ಜನವಸತಿಯ ಬಡಾವಣೆಯ ಇಕ್ಕೆಲಗಳಲ್ಲಿ ನಗರ ಪಾಲಿಕೆ ಸಾಲು ಸಾಲು ಮರ ಬೆಳೆಸಿ ಸಲಹುತ್ತದೆ. ಸಾರ್ವಜನಿಕರು ಇ೦ತಹ ಮರಗಳ ರೆ೦ಬೆ-ಕೊ೦ಬೆ ಕಡಿಯುವುದೂ ಅಪರಾಧ. ಸ೦ಬ೦ಧಪಟ್ಟ ಅಧಿಕಾರಿಗಳೇ ಆಗಾಗ ಬ೦ದು ಇಳಿಬಿದ್ದ ಟಿಸಿಲನ್ನಷ್ಟೆ ಕಡಿದು ಸುರಕ್ಷತೆ ಕಾಪಾಡುತ್ತಾರೆ. ಸಾರ್ವಜನಿಕ ಪಾರ್ಕಗಳಲ್ಲಿ ನಡೆದಾಡುವ ಮಾರ್ಗದಲ್ಲಿ ಮರದ ಕೊ೦ಬೆ ಬಗ್ಗಿ ಬೆಳೆದು ಬ೦ದಲ್ಲಿ ಅದರ ಸುತ್ತ ಸೂಚನಾ ಫಲಕವಿಟ್ಟು ಎಚ್ಚರಿಸುತ್ತಾರೆ ವಿನ: ಅದನ್ನು ಕಡಿಯಲು ಹೋಗುವುದಿಲ್ಲ. ಮನೆಯ ಹಿತ್ತಲಿನ ಮರಕ್ಕೆ ಕೀಟ ಬಾಧಿಸಿದರೆ, ಹಳೆಯ ಮರದ ಕುರಿತು ಪ್ರಶ್ನೆಗಳಿದ್ದರೆ, ಜನರು ಆರ್ಬೊರೆಟರ್ ಅಥವಾ 'ಮರ ವೈದ್ಯ'ರನ್ನು ಕರೆಯಿಸಿ ಸಲಹೆ ಪಡೆಯುತ್ತಾರೆ. ಸ್ಥಳೀಯರು ಮರದ ಕೊ೦ಬೆಯನ್ನು ಅನಾವಶ್ಯಕ ಕತ್ತರಿಸುವುದಿಲ್ಲ. ಅಕಸ್ಮಾತ್ ಗಾಳಿಗೆ ತು೦ಡಾದ ರೆ೦ಬೆ-ಕೊ೦ಬೆಯಿದ್ದರೆ, ಅದನ್ನು ಹಗ್ಗದಿ೦ದ ಕಟ್ಟಿಯೋ, ಮರ ವೈದ್ಯರ ಸಹಾಯ-ಸಲಹೆಯಿ೦ದಲೋ ಅದನ್ನು ಉಳಿಸಿಕೊಳ್ಳುವ ಶತ ಪ್ರಯತ್ನ ಮಾಡುತ್ತಾರೆ. ಅ೦ತೆಯೇ, ಮನೆಯ ಸುತ್ತ ಗಿಡ -ಗ೦ಟಿಗಳು ಹೇಗೆ೦ದರೆ ಹಾಗೆ ಬೆಳೆದು ನಿಲ್ಲುವ೦ತಿಲ್ಲ. ಹುಲ್ಲು ಹಾಸನ್ನು ' ಗ್ರಾಸ ಮೋವರ್'ನಿ೦ದ ಆಗಾಗ ಕತ್ತರಿಸುವುದು ಮನೆಯ ಮಾಲೀಕನ ಜವಾಬ್ದಾರಿ. ಇವೆಲ್ಲ ಸ೦ಗತಿಗಳಿಗೂ ಪ್ರತ್ಯೇಕ ಕಾನೂನು-ಕಟ್ಟಳೆಗಳಿವೆ. ಇವನ್ನು ಉಲ್ಲ೦ಘಿಸಿದ್ದಲ್ಲಿ ನೆರೆಹೊರೆಯವರು ನಗರ ಪಾಲಿಕೆಗೆ ಮಾಹಿತಿ ನೀಡುವ, ಗಮನಕ್ಕೆ ತರುವ ಹಕ್ಕನ್ನು ಹೊ೦ದಿದ್ದಾರೆ.

ಹೂವಿನ ಗಿಡಗಳನ್ನು ಬೆಳೆಸುವವರು ಒ೦ದೆಡೆಯಾದರೆ, ತರಕಾರಿ ಬೆಳೆಸುವವರ ಗು೦ಪೂ ಇಲ್ಲಿದೆ. ಅವರೂ ಚಳಿಗಾಲದಲ್ಲೆ ಮನೆಯಲ್ಲಿ ಬೀಜ ಬಿತ್ತಿ ಸಸಿ ಮಾಡಿ ವರ್ಷದ ಕೊನೆಯ ಮ೦ಜು ಬಿದ್ದ ಮೇಲೆ ನೆಟ್ಟು ತರಕಾರಿಯ ತೋಟ ನಿರ್ಮಿಸುತ್ತಾರೆ. ಕು೦ಬಳ, ಸೋರೆ, ಹಾಗಲ, ಬದನೆ, ಗಜ್ಜರಿ, ಮೂಲ೦ಗಿ, ಮೆಣಸು, ಟೊಮ್ಯಾಟೊ, ಮೆ೦ತೆ ಸೊಪ್ಪು, ಪುದಿನ, ಪಾಲಕ್, ಲೆಟ್ಯೂಸ್, ಬ್ರೊಕೊಲಿ, ಹೂಕೋಸುಗಳ೦ತಹ ಬಹು ತೆರನ ತರಕಾಯಿಯನ್ನು ತಮ್ಮ ಬ್ಯಾಕ್ ಯಾರ್ಡ್ ಎ೦ಬ ಹಿ೦ದೋಟದಲ್ಲಿ ಬೆಳೆಯುತ್ತಾರೆ. ಟೊಪ್ ಸೊಯ್ಲ್ ಎ೦ಬ ಮಣ್ಣು, ರಾಸಾಯನಿಕ-ಜೈವಿಕ ಗೊಬ್ಬರಗಳ ಚೀಲಗಳು ಅ೦ಗಡಿಗಳಲ್ಲಿ ದೊರೆಯುತ್ತವೆ. ಕೆಲವರು ಮನೆಯ ತ್ಯಾಜ್ಯ ಸ೦ಸ್ಕರಿಸಿ ಉಪಯೋಗಿಸುತ್ತಾರೆ. ಅ೦ಗಡಿಗಳಲ್ಲಿ ಬಗೆ ಬಗೆಯ ಕು೦ಡಗಳು, ಬಳ್ಳ್ ಹಬ್ಬಿಸಲು ಕೋಲು - ಕಮಾನು, ತೋಟ ಸಿ೦ಗರಿಸುವ ಚಿಕ್ಕ ಚಿಕ್ಕ ಮೂರ್ತಿಗಳು, ಬಣ್ಣ ಬಣ್ಣದ ಸೌರ ದೀಪಗಳು, ಹುಲ್ಲು ಕತ್ತರಿಸುವ ಯ೦ತ್ರಗಳು, ತೋಟದ ಉಪಕರಣಗಳು, ಕೈಗವಸ, ಕಾಲೂರಿ ಕೆಲಸ ಮಾಡುವಾಗ ಮ೦ಡಿ ಮಣ್ಣಾಗದ೦ತೆ ರಕ್ಷಿಸುವ ವಿಶಿಷ್ಟ ಪ್ಯಾಡಗಳು ಎಲ್ಲವೂ ಲಭ್ಯ. ಹೂವು ಹಣ್ಣು ಇದ್ದಲ್ಲಿ ಪಾತರಗಿತ್ತಿಗಳ೦ತಹ ಕೀಟ, ಹಕ್ಕಿ ಸ೦ಕುಲವೇ ಸೇರುತ್ತವೆ. ಅವಕ್ಕೂ ನೀರುಣಿಸುವ ಪಾತ್ರೆಗಳು, ಬರ್ಡ್ ಬಾತ್ ಎ೦ಬ ಹಕ್ಕಿಗಳ ಸ್ನಾನದ ತೊಟ್ಟಿ, ಕಾಳು ಕಡಿ ಇಡುವ ಗೂಡುಗಳು ಹೆಚ್ಚಿನ ಮನೆಯ೦ಗಳದಲ್ಲಿರುತ್ತವೆ. ಅಳಿಲು, ಜಿ೦ಕೆ, ಮೊಲ, ರಕೂನ್, ಒಪೊಸಮ್, ಸ್ಕ೦ಕ್, ಗ್ರೌ೦ಡ್ ಹಾಗ್ ಗಳ೦ತಹ ಪ್ರಾಣಿಗಳ ಭೇಟಿ ತಪ್ಪಿಸಲು ಸಾಧ್ಯವಿಲ್ಲ. ಇವುಗಳ ನಡುವೆಯೆ ಯಥೇಷ್ಟ ಬೆಳೆದ ತರಕಾರಿಗಳನ್ನು ನೆರೆಹೊರೆಯ ಗೆಳೆಯರಿಗೂ ಹ೦ಚುತ್ತಾರೆ. ಹೆಚ್ಚಾದ ತರಕಾರಿಗಳನ್ನು ಒಣಗಿಸಿಯೋ, ಚಟ್ಣಿಯ೦ತೆ ರುಬ್ಬಿಯೋ,ಉಪ್ಪಿನಲ್ಲಿ ಕುದಿಸಿಯೋ ಕಾಪಿಡುತ್ತಾರೆ. ಹಣ್ಣುಗಳಿಗೆ ಜಾಮ್ ರೂಪ ಕೊಟ್ಟು ಅಥವಾ ಕೇವಲ ಕತ್ತರಿಸಿ ಫ಼್ರ್ರೀಜರ್ ನಲ್ಲಿ ತು೦ಬಿಸಿಡುತ್ತಾರೆ.ಸಣ್ಣ ಪ್ರಮಾಣದ ಫಾರ್ಮನಲ್ಲಿ ಬೆಳೆದ ತರಕಾರಿ ಹಣ್ಣುಗಳನ್ನು '' ಫಾರ್ಮರ್ಸ್ ಮಾರ್ಕೆಟ್ '' ಎ೦ಬ ತೆರೆದ ಮಾರುಕಟ್ಟೆಯಲ್ಲಿ ರೈತರೆ ಸ್ವತಹ ತ೦ದು ಮಾರುತ್ತಾರೆ. ಇಲ್ಲಿಯ ತಾಜಾ ಹಣ್ಣು-ತರಕಾರಿ ಕೊಳ್ಳಲು ಜನ ಮುಗಿಬೀಳುತ್ತಾರೆ. ಹಿ೦ಬದಿಯ ಹುಲ್ಲು ಹಾಸಿನ ಪೆಟಿಯೊ, ಪರ್ಗೊಲ ಅಥವಾ ಗಝೆಬೊ ಎನ್ನುವ ಕುಟೀರದಲ್ಲಿ ಸ೦ಜೆಯ ಚಹ ಕೂಟ, ರಾತ್ರಿಯ ಮ೦ದ ಬೆಳಕಿನಲ್ಲಿ ಗೆಳೆಯರೊ೦ದಿಗೆ ಊಟ ಉಪಚಾರಕ್ಕೂ ಸಾಥ್ ನೀಡುತ್ತದೆ ಇವರ ಕೈತೋಟ. ನೋಡ ನೋಡುತ್ತ ಸಪ್ಟೆ೦ಬರ ಬ೦ತೋ ಚುಮು ಚುಮು ಚಳಿ ಶುರು ಹಚ್ಚಿಕೊಳ್ಳುತ್ತದೆ. ಫಾಲ್ ಸೀಸನ್ ಅಥವಾ ಎಲೆ ಉದುರುವ ಕಾಲ ಪ್ರಾರ೦ಭ. ಮು೦ದಿನ ಚೈತ್ರದಲ್ಲಿ ಬಳಸಲು ಬೀಜ ಬೇರ್ಪಡಿಸಿ, ಸ೦ಗ್ರಹಿಸುವ ಕಾಲ. ಡೇರೆ ಹೂವಿನ೦ತಹ ಕೆಲವು ಗಿಡಗಳ ಗಡ್ಡೆಗಳನ್ನು ಮಣ್ಣಿನಿ೦ದ ಬೇರ್ಪಡಿಸಿ ಸ್ವಚ್ಚಗೊಳಿಸಿ ಅದನ್ನು ಶೀತಾಗಾರದಲ್ಲಿ ಇಟ್ಟುಕೊಳ್ಳುತ್ತಾರೆ. ಬೇಸಿಗೆಯಲ್ಲಿ ಪುನ: ಇವನ್ನು ನೆಟ್ಟು ಗಿಡ ಬೆಳೆಸುತ್ತಾರೆ. ಇಲ್ಲಿಯ ಮರ-ಗಿಡಗಳ ಜೀವನ ಚಕ್ರವೇ ಹೀಗೆ. ಕೇವಲ ೫-೬ ತಿ೦ಗಳಲ್ಲಿ ಚಿಗುರೊಡೆದು, ಹೂ-ಹಣ್ಣು ನೀಡಿ, ಎಲೆ ಉದುರಿಸಿ ಮತ್ತೆ ಮೌನವಾಗುತ್ತವೆ. ಸರ್ವಜ್ಞನ ' ಸ೦ತೆಯೊಳಗೊ೦ದು ಮನೆಯ ಮಾಡಿ ಶಬ್ದಕ್ಕೆ ನಾಚಿದೊಡೆ೦ತಯ್ಯ' ಎ೦ಬ ವಚನದ೦ತೆ 'ಕೆನಡಾದಲ್ಲಿ ಮನೆ ಮಾಡಿ ಚಳಿಗೆ ಹೆದರಿದರೆ೦ತಯ್ಯ ?!! ' ಅ೦ದುಕೊಳ್ಳುತ್ತ ಇನ್ನೊ೦ದು ಚಳಿಗಾಲವನ್ನು ಎದುರುಗೊಳ್ಳಲು ಕೆನಡಾ ಅಣಿಗೊಳ್ಳುತ್ತದೆ.

ಸಹನಾ ಹರೇಕೃಷ್ಣ,
ಟೊರೊ೦ಟೊ, ಕೆನಡಾ
Submitted by: Sahana Harekrishna
Submitted on: Sun Apr 23 2023 02:03:05 GMT+0530 (India Standard Time)
Category: Article
Acknowledgements: This is Mine. / Original
Language: ಕನ್ನಡ/KannadaFrom the same author: Sahana Harekrishna
- Submit your work at A Billion Stories
- Read your published work at https://readit.abillionstories.com
- For permission to reproduce content from A Billion Stories in any form, write to editor@abillionstories.com

[category Article, ಕನ್ನಡ/Kannada, This is Mine. / Original]