ಭುಜಕ್ಕೆ ಕಿಟಕಿಯ ಆಸರೆ. ಮನದ ತುಮುಲಕ್ಕೆ ಪದಗಳ ಆಸರೆ
ಎಂದೋ ಪ್ರಾರಂಭವಾದ ಹಾಡಿಗೆ ಪಲ್ಲವಿಯ ಆಸರೆ
ಎಂದೋ ಮುಗಿಯುವ ಹಾಡಿಗೆ ಕಾಲನ ಆಸರೆ
ಕ್ಷಣಿಕ ಸ್ವಾತಂತ್ರ್ಯಕ್ಕೆ ಸ್ವರಗಳ ಆಸರೆ.
ಸೂರೆ ಹೋದ ಪಟ್ಟಣದ ದಂತಕಥೆಯಂತೆ
ಹಿಡಿಯಷ್ಟು ಜೀವ... ಮುಡಿದಷ್ಟು ನಲಿವು
ಮೃದಂಗದ ತಕಧಿಮಿಯಲ್ಲಿ ನಿನ್ನ ಉಸಿರಿನ ನೆರಳು
ಕಂಡೂ ಕಾಣದಂತೆ ತಾಳ ತಪ್ಪುವ ಬೆರಳುಗಳು .
ಯಾಕೆ ಬರಲಿಲ್ಲ ಮತ್ತೆ ಆ ದಿನ ಎಂಬ ಆಕ್ಷೇಪ
ಥಟ್ಟನೆ ಎದ್ದ ಸಣ್ಣ ಅಪಸ್ವರಕೆ ನವಿರಾದ ಎಚ್ಚರಿಕೆ
ಧ್ವನಿಯ ಕಂಪನ ಇಂದಿಗೂ ಗುಪ್ತಗಾಮಿನಿ
ಅಲ್ಲಿರಲಿ ಅದು ರಾಗಕ್ಕೆ ನಿಲುಕದ ಭಾವವಾಗಿ.
ಕನಸಿನಂತೆ ಕಳೆದು ಹೋದ ಆ ಮುಸ್ಸಂಜೆಯ ಛಾಯೆ
ಮರುಭೂಮಿಯಲ್ಲಿ ಚಿಗುರಿದ ಜೀವಸೆಲೆ
ಇನ್ನೆಲ್ಲಿ ಅಲೆಮಾರಿ ಬದುಕು ಸಾಕು ಬಿಡು ಹುಡುಕಾಟ
ಅತ್ತಿತ್ತ ಪರದಾಡದಿರು ನೀನಿರುವಲ್ಲೇ ಸುಮುಧುರ ಗಾನ.
ನೀರಲ್ಲಿ ಮೀನಿನ ಹೆಜ್ಜೆ ಕಂಡವರುಂಟೇ
ಕಾಡು ವನದಲ್ಲಿ ಜೋಗಿಯ ಜಾಡು ಹಿಡಿದವರುಂಟೇ
ನಿನ್ನೆಯ ಹಾಡುಗಳು ಕನ್ನಡಿಯೊಳಗಿನ ಗಂಟು
ಅಳಿಸಿ ಹೋದ ಪದಗಳು... ಹಾಳು ಮರೆವು.
-Daya Bhat
Photo By:
Submitted by: Daya Bhat
Submitted on: Tue May 02 2017 13:53:02 GMT+0530 (IST)
Category: Original
Language: ಕನ್ನಡ/Kannada
- Read submissions at http://readit.abillionstories.com
- Submit a poem, quote, proverb, story, mantra, folklore, article, painting, cartoon or drawing at http://www.abillionstories.com/submit
No comments:
Post a Comment